ಕೊಪ್ಪಳ
ಮದುವೆಯಾದ ತಿಂಗಳಲ್ಲೇ ನವವಿವಾಹಿತೆಯೊಬ್ಬಳು ದಿಢೀರ್ ನಾಪತ್ತೆಯಾಗಿದ್ದು, ಆಘಾತ ತಾಳಲಾರದೆ ಆಕೆಯ ಮಾವ ಹೃದಯಾಘಾತದಿಂದ ಮೃತಪಟ್ಟಿರುವ ಅತ್ಯಂತ ವಿಷಾದನೀಯ ಘಟನೆ ನಗರದ ಗೌರಿ ಅಂಗಳದಲ್ಲಿ ವರದಿಯಾಗಿದೆ.
ಘಟನೆಯ ವಿವರ: ಕೊಪ್ಪಳದ ನಿವಾಸಿ ನಾಗರಾಜ್ ಹಾಗೂ ರಾಯಚೂರು ಜಿಲ್ಲೆಯ ಸಿಂಧನೂರಿನ ಸಂಜನಾ ಎಂಬುವವರ ವಿವಾಹ ಕಳೆದ ಫೆಬ್ರವರಿ 8ರಂದು ಶಾಸ್ತ್ರೋಕ್ತವಾಗಿ ನೆರವೇರಿತ್ತು. ಪರಸ್ಪರ ಒಪ್ಪಿಗೆಯೊಂದಿಗೆ ದಾಂಪತ್ಯ ಜೀವನಕ್ಕೆ ಕಾಲಿಟ್ಟಿದ್ದ ಈ ಜೋಡಿ ಸುಖವಾಗಿಯೇ ಇತ್ತು. ಆದರೆ ಮಾರ್ಚ್ 21ರ ಶನಿವಾರ ರಾತ್ರಿ ಸಂಭವಿಸಿದ ಒಂದು ಅನಿರೀಕ್ಷಿತ ತಿರುವು ಇಡೀ ಕುಟುಂಬವನ್ನು ಶೋಕಸಾಗರದಲ್ಲಿ ಮುಳುಗಿಸಿದೆ.
ಔಷಧ ತರಲು ಹೋದಾಗ ನಡೆದಿದ್ದೇನು?: ಮಾರ್ಚ್ 21ರಂದು ರಾತ್ರಿ ಸುಮಾರು 8:30ರ ಸುಮಾರಿಗೆ ಸಂಜನಾ ತಮಗೆ ಅಸ್ವಸ್ಥತೆ ಕಾಣಿಸಿಕೊಂಡಿದೆ ಎಂದು ಪತಿ ನಾಗರಾಜ್ಗೆ ತಿಳಿಸಿದ್ದಾರೆ. ಪತ್ನಿಗಾಗಿ ಔಷಧ ತರಲು ನಾಗರಾಜ್ ಮಾರುಕಟ್ಟೆಗೆ ತೆರಳಿದ್ದರು. ಕೇವಲ ಹದಿನೈದು ನಿಮಿಷಗಳಲ್ಲಿ ವಾಪಸ್ ಮನೆಗೆ ಬಂದಾಗ ಪತ್ನಿ ಸಂಜನಾ ನಾಪತ್ತೆಯಾಗಿದ್ದು ಕಂಡುಬಂದಿದೆ. ಆತಂಕಗೊಂಡ ನಾಗರಾಜ್ ತಕ್ಷಣವೇ ಸಂಬಂಧಿಕರು ಹಾಗೂ ಪರಿಚಿತರ ಬಳಿ ವಿಚಾರಿಸಿದರೂ ಯಾವುದೇ ಮಾಹಿತಿ ಲಭ್ಯವಾಗಿಲ್ಲ.
ಆಘಾತಕ್ಕೆ ಬಲಿಯಾದ ಹಿರಿಯ ಜೀವ:
ಮನೆಗೆ ಬಂದ ಸೊಸೆ ನಿಗೂಢವಾಗಿ ನಾಪತ್ತೆಯಾದ ವಿಷಯ ತಿಳಿದ ನಾಗರಾಜ್ ಅವರ ತಂದೆ ಖಂಡೆಪ್ಪ ಅವರಿಗೆ ಈ ಸುದ್ದಿಯನ್ನು ಸಹಿಸಿಕೊಳ್ಳಲು ಸಾಧ್ಯವಾಗಲಿಲ್ಲ. ಮಾನಸಿಕವಾಗಿ ತೀವ್ರ ನೊಂದ ಅವರು ಅದೇ ರಾತ್ರಿ ಹೃದಯಾಘಾತಕ್ಕೊಳಗಾಗಿ ಕೊನೆಯುಸಿರೆಳೆದಿದ್ದಾರೆ. ಮನೆಯಲ್ಲಿ ಮದುವೆಯ ಸಂಭ್ರಮದ ಕಳೆ ಇನ್ನೂ ಮಾಸುವ ಮುನ್ನವೇ ಸಾವಿನ ಸೂತಕ ಆವರಿಸಿದ್ದು, ಸ್ಥಳೀಯರಲ್ಲಿ ಮರುಕ ಉಂಟುಮಾಡಿದೆ.
ಟ್ಯಾಟೂ ಸುಳಿವು:
ನಾಪತ್ತೆಯಾಗಿರುವ ಸಂಜನಾ ಅವರ ಕೈಮೇಲೆ 'ರವಿ' ಎಂಬ ಹೆಸರಿನ ಟ್ಯಾಟೂ ಇರುವುದಾಗಿ ಪೊಲೀಸ್ ದೂರಿನಲ್ಲಿ ಉಲ್ಲೇಖಿಸಲಾಗಿದೆ. ಯುವತಿಯ ನಾಪತ್ತೆಗೂ ಮತ್ತು ಈ ಹೆಸರಿಗೂ ಏನಾದರೂ ಸಂಬಂಧವಿದೆಯೇ ಎಂಬ ನಿಟ್ಟಿನಲ್ಲಿ ಪೊಲೀಸರು ತನಿಖೆ ಕೈಗೊಂಡಿದ್ದಾರೆ. ಸಂಜನಾ ಪೋಷಕರ ಮನೆಗೂ ಹೋಗದಿರುವುದು ಹಲವು ಅನುಮಾನಗಳಿಗೆ ಎಡೆಮಾಡಿಕೊಟ್ಟಿದೆ.
ಪೊಲೀಸರಿಂದ ತನಿಖೆ. ಪತ್ನಿಯ ನಾಪತ್ತೆ ಕುರಿತು ನಾಗರಾಜ್ ಕೊಪ್ಪಳ ನಗರ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದಾರೆ. ಪ್ರಕರಣ ದಾಖಲಿಸಿಕೊಂಡಿರುವ ಪೊಲೀಸರು ತನಿಖೆ ಮುಂದುವರಿಸಿದ್ದು, ಯುವತಿಯ ಪತ್ತೆಗಾಗಿ ಶೋಧ ಕಾರ್ಯ ಚುರುಕುಗೊಳಿಸಿದ್ದಾರೆ.
Post a Comment